== ಆಡು ಸೋಗೆ (ಸಿಂಹ ಪರ್ಣಿ) == ಸಂಸ್ಕೃತ-ವಸಾಕ ಹಿಂದಿ-ವಸಿಕ, ಬನ್ಸಾ ತೆಲುಗು-ಅಡ್ಡಸರಮು ತಮಿಳು-ಅಡಡೊರಾಮ್ ಮರಾಠಿ- ಅಡುಲ್‍ಸಾ == ವರ್ಣನೆ == ಒಂದರಿಂದ ನಾಲ್ಕು ಮೀಟರ್ ಎತ್ತರ ಬೆಳೆಯುವ ಹಸಿರು ಕಾಂಡವ ಗಿಡ. ಇದರ ಎಲೆಗಳು ಮಾವಿನೆಲೆಯನ್ನು ಹೋಲುತ್ತದೆ. ಆದರೆ ಮೃದು ಮತ್ತು ನುಣುಪಾಗಿರುತ್ತದೆ. ಎಲೆಗಳು ಕೆಳಗಡೆವಾಲಿರುತ್ತವೆ. ಎಲೆಗಳ ತೊಟ್ಟು ಕಾಂಡಕ್ಕೆ ಸೇರುವ ತ್ರಿಕೋನದಲ್ಲಿ ಹೂ ಗೊಂಚಲು ಬಿಡುವುದು. ಪುಷ್ಪಪಾತ್ರೆ ಹೂವಿನ ತೊಟ್ಟಿನ ತುದಿಯಲ್ಲಿರುವುದು. ಇದರ ಮೇಲೆ ಹೂವುಗಳು ಗುಂಪಾಗಿ ತೆನೆಯಂತಿರುತ್ತದೆ. ಹೂವಿನ ಗುಚ್ಛವು ಬಿಳಿವರ್ಣದ್ದಾಗಿದ್ದರೂ, ಅಲ್ಲಲ್ಲಿ ತಿಳಿ ನೇರಳೆ ಅಥವಾ ತಿಳಿ ಗುಲಾಬಿ ಬಣ್ಣವಿರುವುದು. ಕಾಯಿ ಚಪ್ಪಟೆಯಾಗಿರುತ್ತದೆ. ಇದರ ಒಳಗಡೆ ನಾಲ್ಕು ಬೀಜಗಳು ಇರುತ್ತವೆ. ಸಾಮಾನ್ಯವಾಗಿ ಪ್ರತಿ ಹಳ್ಳಿಯಲ್ಲಿಯೂ ಈ ಗಿಡವನ್ನು ಕಾಣಬಹುದಾಗಿದೆ. ಇದು ಬಹಳ ಉಪಯುಕ್ತವಾಗಿದೆ. ಇದರ ಎಲೆಗಳು ಸಿಂಹದ ಹಸ್ತದಂತಿರುತ್ತವೆ. ಆದುದರಿಂದ ಈ ಮೂಲಿಕೆಗೆ ಸಿಂಹ ಪರ್ಣಿ ಎಂದು ಸಂಸ್ಕೃತ ಗ್ರಂಥದಲ್ಲಿ ತಿಳಿಸುತ್ತವೆ. ಇದರಲ್ಲಿ ‘ವ್ಯಾಸಿಸೈನ್’ ಎನ್ನುವ ಕಟು ಕಹಿ ಕ್ಷಾರವಿರುತ್ತದೆ. ಇದು ಉಸಿರಾಟದ ಶ್ವಾಸನಾಳಗಳ ವ್ಯಾಧಿಯನ್ನು ಗುಣಪಡಿಸುವುದರಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ವಸಾಕ ಅನ್ನುವುದು ಮತ್ತೊಂದು ಹೆಸರು. ಜೇನು ದುಂಬಿಗಳು ಅತಿಯಾಗಿ ಬಯಸುವ ಮಕರಂದ ಭರಿತ ಪುಷ್ಪ ಬಿಡುವ ಗಿಡ. == ಸರಳ ಚಿಕಿತ್ಸೆಗಳು == === ದಮ್ಮು, ಶ್ವಾಸವಿಕಾರದಲ್ಲಿ === ಬೆಳ್ಳುಳ್ಳಿ, ಹಿಪ್ಪಲಿ, ಮೆಣಸು, ಕಟುಕರೋಹಿಣಿ ಮತ್ತು ಆಡುಸೋಗೆ ಎಲೆಗಳನ್ನು ಸಮತೂಕದಷ್ಪು ಬಿಸಿನೀರಿನಲ್ಲಿ ಅರೆದು ಸ್ವಲ್ಪ ಜೇನುತುಪ್ಪ ಸೇರಿಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಉಪಯೋಗಿಸುವುದು ಅಥವಾ ಆಡುಸೋಗೆ ಎಲೆಯ ಒಣಗಿದ ಚೂರ್ಣದ ಗೊಗೆಯನ್ನು ಬೀಡಿ ರೂಪದಲ್ಲಿ ಸೇದುದರಿಂದ ದಮ್ಮು ವ್ಯಾಧಿ ಉಪಶಮನವಾಗುತ್ತದೆ. === ಕೆಮ್ಮು === ಸುಮಾರು ೫ ಗ್ರಾಂ ಆಡುಸೋಗೆ, ೫ ಗ್ರಾಂ ಹಸಿರು ಅಮೃತಬಳ್ಳಿಯ ಕಷಾಯ ಮಾಡಿ ಆರಿಸಿ ಶೋಧಿಸಿಟ್ಟುಕೊಳ್ಳುವುದು. ಇದನ್ನು ದಿವಸಕ್ಕೆರಡು ಬಾರಿ ೧೦ ಗ್ರಾಂ ನಷ್ಟು ಶುದ್ಧ ಜೇನಿನಲ್ಲಿ ಕುಡಿಯುವುದು. ಇದು ಒಂದು ಉಪಯುಕ್ತವಾದ ವನೌಷಧಿ. ಮಕ್ಕಳಿಗಾದರೆ ಆಡುಸೋಗೆ ಎಲೆಗಳ ೫ ಗ್ರಾಂ ರಸವನ್ನು ಸ್ವಲ್ಪ ಜೇನಿನಲ್ಲಿ ಸೇರಿಸಿ, ಸ್ವಲ್ಪ ಬಿಸಿಮಾಡಿ ದಿವಸಕ್ಕೆ ೪ ರಿಂದ ೫ ಬಾರಿ ಕುಡಿಸುವುದು. == ಅಸ್ತಮ, ಗೂರಲು == ಜ್ಯೇಷ್ಠಮಧು ೧೦ ಗ್ರಾಂ, ಹಿಪ್ಪಲಿ ೨೦ ಗ್ರಾಂ ಹಾಗೂ ೫ ಗ್ರಾಂ ಆಡುಸೋಗೆ ಎಲೆಗಳನ್ನು ಚೆನ್ನಾಗಿ ಅರೆದು ಅಷ್ಟಾಂಶ ಕಷಾಯವನ್ನು ಮಾಡಿ ದಿವಸಕ್ಕೆ ಮೂರು ಬಾರಿ ಸ್ವಲ್ಪ ಜೇನು ಸೇರಿಸಿ ಕುಡಿಯುವುದು ಅಥವಾ ಆಡುಸೋಗೆ ಎಲೆಯ ರಸ ಮತ್ತು ಸಮಭಾಗ ಸಕ್ಕರೆ ಸೇರಿಸಿ ರಸಾಯನ ಮಾಡಿ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ರಾತ್ರಿ ನೆಕ್ಕಿಸುವುದು. ಅಥವಾ ೧೦-೧೨ ಆಡುಸೋಗೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಮಾಡಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಸುವುದು. == ರಕ್ತಕಾಸ == ಆಡುಸೋಗೆ ಎಲೆ ಮತ್ತು ಹಿಪ್ಪಲಿ, ಚೂರ್ಣ ಸೇರಿಸಿ ಮಾಡಿದ ಕಷಾಯವನ್ನು ಪ್ರತಿ ದಿವಸ ಬೆಳಿಗ್ಗೆ ಮತ್ತು ಸಂಜೆ ಕುಡಿಸುವುದು. ಪ್ರಮಾಣ ಎರಡು ಚಮಚ ಅಥವಾ ಆಡುಸೋಗೆ ಮತ್ತು ಕೊತ್ತಂಬರಿ ಬೀಜ ನುಣ್ಣಗೆ ರುಬ್ಬಿ ಕಷಾಯವನ್ನು ಮಾಡಿ ಬೆಳಿಗ್ಗೆ ಮತ್ತು ರಾತ್ರಿ ಸ್ವಲ್ಪ ಕುಡಿಸುವುದು. == ಮೂತ್ರಾಶಯದ ಭಾದೆ, ನೋವು == ೨೦ ಗ್ರಾಂ ಆಡುಸೋಗ ಎಲೆಗಲ ರಸಕ್ಕೆ ೨೦ ಗ್ರಾಂ ಜೇನು ತುಪ್ಪವನ್ನು ಸೇರಿಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು ಹಾಗೂ ಬೇವಿನ ಎಲೆ ಮತ್ತು ಆಡುಸೋಗೆ ಎಲೆಗಳನ್ನು ಜಜ್ಜಿ ಸ್ವಲ್ಪ ಬಿಸಿ ಮಾಡಿ ಕಿಬ್ಬೊಟ್ಟೆಗೆ ಕಟ್ಟುವುದು ಅಥವಾ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡುವುದು ಇದರಿಂದ ಮೂತ್ರಾಶಯದ ನೋವು ನಿಲ್ಲುವುದು. == ಹುಳುಕಡ್ಡಿ, ತುರಿ, ನವೆ == ಆಡುಸೋಗೆಯ ಚಿಗುರೆಲೆಗಳ ಜೊತೆಗೆ ಸ್ಪಲ್ಪ ಅರಿಶಿಣ ಸೇರಿಸಿ ಗೋಮೂತ್ರದಲ್ಲಿ ನುಣ್ಣಗೆ ಅರೆದು ಲೇಪಿಸುವುದು. ಎಣ್ಣೆ ಪದಾರ್ಥಗಳನ್ನು ವರ್ಜಿಸುವುದು. ಸೋಪನ್ನು ಬಳಸದೆ ಶೀಗೆಕಾಯಿ ಹಚ್ಚಿ ಸ್ನಾನ ಮಾಡುವುದು. == ರಕ್ತಪಿತ್ತ == ಶರೀರದ ಯಾವುದೇ ಭಾಗದಿಂದ ವಿನಾಕಾರಣ ರಕ್ತ ಬೀಳುವ ಕಾಯಿಲೆ ಅಂದರೆ ಕಿವಿ, ಕಣ್ಣು, ಮೂಗು, ಬಾಯಿ, ಮಲದ್ವಾರ ಹಾಗೂ ದೇಹದ ಒಳಗಡೆ ಅಂದರೆ ಕರುಳು ಜಠರ ಇವುಗಳಿಂದ ರಕ್ತ ಬೀಳುವುದು. ಆಡುಸೋಗೆ ಹಸಿ ಎಲೆರಸ ಸುಮಾರು ೧೫ ಗ್ರಾಂನಷ್ಟುನ್ನು ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆರಡು ವೇಳೆ ಐದು ದಿವಸ ಕುಡಿಸುವುದು ಅಥವಾ ಪರ್ಪಾಷ್ಠಕ ಆಡುಸೋಗೆ ಸೊಪ್ಪು, ಕೊತ್ತಂಬರಿ, ಒಣಗಿದ ದ್ರಾಕ್ಷಿ ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಕಿವುಚಿ ೩೦ ಗ್ರಾಂ ನಷ್ಷು ಕುಡಿಯುವುದು. ದಿನಕ್ಕೆ ಮೂರುಬಾರಿ ಬಳಸುವುದು ಅಥವಾ ಮೇಲಿನ ವಸ್ತುಗಳ ನಯವಾದ ಚೂರ್ಣ ಮಾಡಿ ಒಂದು ಚಮಚದಷ್ಟು ಚೂರ್ಣವನ್ನು ಒಂದು ಬಟ್ಟಲು ಶುದ್ಧವಾದ ತಣ್ಣೀರಿನಲ್ಲಿ ರಾತ್ರಿ ಹಾಕಿ ಬೆಳಿಗ್ಗೆ ಈ ನೀರನ್ನು ಕುಡಿಯುವುದು. == ಕಫದ ಕೆಮ್ಮು, ಜ್ವರ, ಉಬ್ಬಸ == ಅಮೃತಬಳ್ಳಿ ಗುಳ್ಳದ ಬೇರು ಮತ್ತು ಆಡುಸೋಗೆ ಬೇರು ಇವುಗಳ ೩೦ ಗ್ರಾಂ ಗಳಷ್ಟು ಕಷಾಯವನ್ನು ಮಾಡುವುದು, ಕಷಾಯವನ್ನು ಎರಡು ಭಾಗ ಮಾಡಿ, ಬೆಳಿಗ್ಗೆ ಸಾಯಂಕಾಲ ಕುಡಿಸುವುದು. ಈ ಮೂಲಿಕೆಗೆ ಶ್ವಾಸಕೋಶಗಳ ಬಾಧೆ ನೀಗಿ ಕೆಮ್ಮು, ದಮ್ಮು, ಉಬ್ಬಸ, ಗೂರಲು ವಾಸಿ ಮಾಡುವ ಮಹಾ ಗುಣವಿದೆ. ಶ್ವಾಶಕೋಶ ಶ್ವಾಸನಾಳದಲ್ಲಿರುವ ಕಫವನ್ನು ಕರಗಿಸಿ ಹೊರ ಹಾಕಿ ರಕ್ತ ಸುದ್ಧ ಮಾಡಿ ಜ್ವರವನ್ನು ತಗ್ಗಿಸಿ ರಕ್ತ ಉಗುಳುವ ವ್ಯಾಧಿಯನ್ನು ವಾಸಿ ಮಾಡುವ ಅಪೂರ್ವ ಶಕ್ತಿ ಇದೆ. == ವಾಸಾದಿಘೃತ(ಚರಕ ಸಂಹಿತ) == ಆಡುಸೋಗೆ ಎಲೆಗಳ ರಸ ತ್ರಿಕಟು, ಹಿಪ್ಪಲಿ, ಜೀರಿಗೆ, ಅಜಮೋದ, ಚಿತ್ರಮೂಲ, ಕಾಡು ಮೇಣಸಿನ ಬೇರು, ಇವುಗಳ ಕಲ್ಕದಿಂದ ತಯಾರಿಸಿದ ಮತ್ತು ಹಸುವಿನ ತುಪ್ಪದಿಂದ ಮಾಡಿದ ಘೃತವನ್ನು ಅರ್ಧ ಚಮಚದಷ್ಟಕ್ಕೆ ಒಂದು ಚಮಚ ಅಪ್ಪಟ ಜೇನು ಸೇರಿಸಿ ಸೇವಿಸುವುದು. ಕಫದ ಕೆಮ್ಮು ವಾಸಿಯಾಗುವುದು. ಇದು ಚರಕ ಮಹರ್ಷಿಗಳ ಅಮೂಲ್ಯ ಕೊಡುಗೆ. == ಉಲ್ಲೇಖ ==